ರಾಮಾಯಣ ಚಿತ್ರದ ಟ್ರೈಲರ್ ಬಿಡುಗಡೆಯಾದ ಬಳಿಕ ಸಾಯಿ ಪಲ್ಲವಿ ಅವರ ಸೀತೆ ಪಾತ್ರದ ಲುಕ್ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಸೀತೆಯ ಉಡುಗೆ ತುಂಬಾ ಮಾಡರ್ನ್ ಆಗಿದೆ, ಪೌರಾಣಿಕ ಪಾತ್ರಕ್ಕೆ ಇದು ಹೊಂದಿಕೆಯಾಗುವುದಿಲ್ಲ ಎಂದು ಕೆಲವರು ಟೀಕೆ ಮಾಡಿದ್ದರು. ಲಾರಾ ದತ್ತ ಅವರ ಕೈಕೇಯಿ ಪಾತ್ರದ ಲುಕ್ ಕೂಡ ಮೀಮ್ಗಳ ಮೂಲಕ ವೈರಲ್ ಆಗಿತ್ತು.
ಈ ಟೀಕೆಗಳಿಗೆ ಇದೀಗ ಚಿತ್ರದ ಕಾಸ್ಟ್ಯೂಮ್ ಡಿಸೈನರ್ಗಳಾದ ರಿಂಪಲ್ ಮತ್ತು ಹರ್ಪ್ರೀತ್ ನರುಲಾ ಸ್ಪಷ್ಟನೆ ನೀಡಿದ್ದಾರೆ. ಇಂತಹ ಪ್ರತಿಕ್ರಿಯೆಗಳು ಬರುತ್ತವೆ ಎಂಬುದು ಮೊದಲೇ ಗೊತ್ತಿತ್ತು. ಆದರೆ, ಪಾರಂಪರ್ಯತೆಗೆ ಧಕ್ಕೆ ಬಾರದಂತೆ ಸಾಕಷ್ಟು ಅಧ್ಯಯನ ಮಾಡಿ ಉಡುಗೆಗಳನ್ನು ವಿನ್ಯಾಸಗೊಳಿಸಿದ್ದೇವೆ ಎಂದು ಹೇಳಿದ್ದಾರೆ.
ಸೀತೆಯ ಉಡುಗೆ ಬಗ್ಗೆ ಮಾತನಾಡಿದ ರಿಂಪಲ್, “ಪುರಾಣಗಳಲ್ಲಿ ಕಾಣುವ ಚಿತ್ರಗಳನ್ನು ಮಾತ್ರ ಆಧಾರ ಮಾಡಿಕೊಳ್ಳಲಿಲ್ಲ. ನಾನು ಪೂಜಿಸುವ ಸೀತಾ ದೇವಿಯನ್ನು ಮನಸ್ಸಿನಲ್ಲಿ ನೆನೆಸಿಕೊಂಡು ಈ ವಿನ್ಯಾಸ ಮಾಡಿದ್ದೇನೆ. ಹೊಸತನದ ಜೊತೆಗೆ ಭಕ್ತಿಯ ಭಾವವೂ ಇರಬೇಕು ಎಂಬ ಉದ್ದೇಶದಿಂದ ಈ ಲುಕ್ ರೂಪಿಸಿದ್ದೇವೆ” ಎಂದು ಹೇಳಿದ್ದಾರೆ.
ಅವರು ಮುಂದುವರೆದು, “ಸಂಶೋಧನೆಯೇ ನಮ್ಮ ಕೆಲಸದ ಅಡಿಪಾಯ. ಆದರೆ ಅದರ ಜೊತೆಗೆ ಕಲಾತ್ಮಕ ದೃಷ್ಟಿಕೋನವೂ ಮುಖ್ಯ. ರಾಮಾಯಣವನ್ನು ಬೇರೆ ಬೇರೆ ಕಾಲದಲ್ಲಿ, ಬೇರೆ ಬೇರೆ ರೀತಿಯಲ್ಲಿ ಚಿತ್ರಿಸಲಾಗಿದೆ. ಇದು ನಮ್ಮ ದೃಷ್ಟಿಕೋನದ ರಾಮಾಯಣ” ಎಂದು ವಿವರಿಸಿದ್ದಾರೆ.
ಇನ್ನೊಂದೆಡೆ, ಕೈಕೇಯಿ ಪಾತ್ರದ ಉಡುಗೆ ಬಗ್ಗೆ ಹರ್ಪ್ರೀತ್ ನರುಲಾ ಮಾತನಾಡಿದ್ದು, “ಕೈಕೇಯಿಯ ಉಡುಗೆಯಲ್ಲಿ ಬಳಸಿರುವ ಹಸಿರು ಬಣ್ಣ ತಾಯ್ತನವನ್ನು ಸೂಚಿಸುತ್ತದೆ. ಮೆರೂನ್ ಬಣ್ಣ ಆ ಪಾತ್ರದ ಭಾವನಾತ್ಮಕ ಸಂಘರ್ಷವನ್ನು ತೋರಿಸುತ್ತದೆ. ಪ್ರತಿಯೊಂದು ಬಣ್ಣ ಮತ್ತು ವಿನ್ಯಾಸಕ್ಕೂ ಒಂದು ಅರ್ಥವಿದೆ. ಅದನ್ನು ತಿಳಿಯುವ ಮುನ್ನವೇ ಕೆಲವರು ಟೀಕೆ ಮಾಡುತ್ತಿದ್ದಾರೆ” ಎಂದು ಹೇಳಿದ್ದಾರೆ.
ಡಿಸೈನರ್ಗಳ ಪ್ರಕಾರ, ಪ್ರತಿಯೊಂದು ಪಾತ್ರದ ಉಡುಗೆಯನ್ನೂ ಸಾಕಷ್ಟು ಅಧ್ಯಯನದ ಬಳಿಕವೇ ಸಿದ್ಧಪಡಿಸಲಾಗಿದೆ. ಮೊದಲು ಸಿನಿಮಾವನ್ನು ನೋಡಿ, ನಂತರ ಅಭಿಪ್ರಾಯ ರೂಪಿಸಬೇಕು ಎಂದು ಅವರು ಮನವಿ ಮಾಡಿದ್ದಾರೆ.