ಬಿಗ್ಬಾಸ್ (Bigg Boss) ಮನೆಯ ಟಾಸ್ಕ್ವೊಂದರಲ್ಲಿ ಭಯಂಕರ ದಾಳಿ-ಪ್ರತಿದಾಳಿ ನಡೆದಿದೆ. ಸ್ಪರ್ಧಿಗಳಾದ ಮಂಜು ಹಾಗೂ ಸೌಂದರ್ಯ ಶೆಟ್ಟಿ (Soundarya Shetty) ನಡುವೆ ನಡೆದ ಜಗಳ ಇದೀಗ ಬಿಗ್ಬಾಸ್ ಮನೆಯಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.
ವಸ್ತುಗಳನ್ನು ಕಾಪಾಡಿಕೊಳ್ಳುವ ಟಾಸ್ಕ್ವೊಂದರಲ್ಲಿ ಸೌಂದರ್ಯ ಬಳಿ ಇದ್ದ ಬಕೆಟ್ ಹಾಗೂ ರಿಂಗ್ನ್ನು ಧನುಷ್ ಮೊದಲು ಕಸಿದುಕೊಳ್ಳಲು ಬಂದಿದ್ದಾರೆ. ಈ ವೇಳೆ ಮಂಜು ಕೂಡ ಎಂಟ್ರಿ ಕೊಟ್ಟಿದ್ದಾರೆ. ಆಗ ಇಬ್ಬರ ನಡುವೆ ಜಗಳ ಶುರುವಾಗಿದೆ.
ಮಂಜುವಿನಿಂದ ವಸ್ತುಗಳನ್ನು ವಾಪಸ್ ಪಡೆದುಕೊಳ್ಳಲು ಸೌಂದರ್ಯ ಕೈಯಿಂದ ಹೊಡೆದಿದ್ದಾರೆ ಎನ್ನಲಾಗಿದ್ದು, ಈ ದೃಶ್ಯ ವೀಡಿಯೋದಲ್ಲಿ ಕಾಣಿಸಿದೆ. ಬಳಿಕ ಮಂಜು ಕೂಡ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸೌಂದರ್ಯ ಬಳಿ ಹೋಗಿ, “ನನಗೆ ಬರ್ತಿರೋ ಕೋಪಕ್ಕೆ ಎತ್ತಿ ಕುಕ್ಕಿಬಿಡ್ತೀನಿ” ಎಂದು ಮಂಜು ಎಚ್ಚರಿಕೆ ನೀಡಿದ್ದಾರೆ ಎನ್ನಲಾಗಿದೆ. ಹೀಗೆ ಬಿಗ್ಬಾಸ್ ಮನೆಯ ಎರಡನೇ ವಾರದಲ್ಲೇ ರೋಷಾವೇಶದ ಆಟಕ್ಕೆ ಈ ಘಟನೆ ಸಾಕ್ಷಿಯಾಗಿದೆ.
ಬಿಗ್ಬಾಸ್ ರೂಲ್ಸ್ ಬ್ರೇಕ್ ಮಾಡಿದ್ರೆ ಏನಾಗುತ್ತೆ?
ಬಿಗ್ಬಾಸ್ ಆಟದ ನಿಯಮಗಳ ಪ್ರಕಾರ ಸ್ಪರ್ಧಿಗಳು ಮತ್ತೊಬ್ಬ ಸ್ಪರ್ಧಿಯ ಮೇಲೆ ಕೈ ಮಾಡುವಂತಿಲ್ಲ. ನಿಯಮ ಉಲ್ಲಂಘನೆಯಾದರೆ ಸ್ಪರ್ಧಿಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಸಾಧ್ಯತೆ ಇರುತ್ತದೆ.
ಇದೀಗ ಟಾಸ್ಕ್ ಆಡುವ ಭರದಲ್ಲಿ ಸೌಂದರ್ಯ ಮಂಜುಗೆ ಹೊಡೆದಿರುವ ದೃಶ್ಯ ಚರ್ಚೆಗೆ ಬಂದಿದೆ. ಹೀಗಾಗಿ ಈ ಘಟನೆಗೆ ಬಿಗ್ಬಾಸ್ ಯಾವ ರೀತಿಯ ಕ್ರಮ ಕೈಗೊಳ್ಳುತ್ತಾರೆ ಎಂಬ ಕುತೂಹಲ ಶುರುವಾಗಿದೆ.
ಹಿಂದಿನ ಸೀಸನ್ಗಳಲ್ಲೂ ಸ್ಪರ್ಧಿಗಳು ಪ್ರತಿಸ್ಪರ್ಧಿಗಳ ಮೇಲೆ ಮ್ಯಾನ್ಹ್ಯಾಂಡ್ಲಿಂಗ್ ಮಾಡಿದ ಹಿನ್ನೆಲೆಯಲ್ಲಿ ಮನೆಯಿಂದ ಹೊರಹೋಗಿದ್ದ ಘಟನೆಗಳು ನಡೆದಿವೆ. ಇದೀಗ ಸೌಂದರ್ಯ ವಿಚಾರದಲ್ಲಿ ಬಿಗ್ಬಾಸ್ ಯಾವ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ. ಇದನ್ನೂ ಓದಿ:
ಗಿಲ್ಲಿ-ರಿಶಾ ಜಗಳ ಮತ್ತೆ ನೆನಪಿಸಿದ ಸೌಂದರ್ಯ-ಮಂಜು ಕಿತ್ತಾಟ
ಬಿಗ್ಬಾಸ್ ಕನ್ನಡ ಸೀಸನ್ 12ರಲ್ಲಿ ಗಿಲ್ಲಿಗೆ ರಿಶಾ ಹೊಡೆದಿದ್ದ ವಿಚಾರ ಭಾರೀ ಚರ್ಚೆಯಾಗಿತ್ತು. ಈ ಘಟನೆಗೆ ಸಂಬಂಧಿಸಿದಂತೆ ಗಿಲ್ಲಿ ಅಭಿಮಾನಿಗಳು ಪ್ರತಿಭಟನೆಯನ್ನೂ ನಡೆಸಿದ್ದರು.
ಇದೀಗ ಸೌಂದರ್ಯ ಕೋಪದಲ್ಲಿ ಮಂಜುಗೆ ಹೊಡೆದಿದ್ದಾರೆ ಎನ್ನಲಾಗಿದ್ದು, ಮಂಜು ಕೂಡ ಆಕ್ರೋಶದಿಂದ ಅತಿರೇಕದ ಮಾತುಗಳನ್ನಾಡಿದ್ದಾರೆ. ಇಬ್ಬರ ನಡುವಿನ ಜಗಳ ತಾರಕಕ್ಕೇರಿರುವ ಹಿನ್ನೆಲೆಯಲ್ಲಿ ಬಿಗ್ಬಾಸ್ ಯಾವ ರೀತಿಯ ಆ್ಯಕ್ಷನ್ ತೆಗೆದುಕೊಳ್ಳುತ್ತಾರೆ ಎಂಬುದೇ ಸದ್ಯದ ಕುತೂಹಲವಾಗಿದೆ.