ಚೆನ್ನೈ: ತಮಿಳುನಾಡಿನ ತೂತುಕುಡಿ ನಗರದಲ್ಲಿ ನಟ ಹಾಗೂ ತಮಿಳಗ ವೆಟ್ರಿ ಕಳಗಂ (TVK) ನಾಯಕ ವಿಜಯ್ ಅವರನ್ನು ‘ನಾಳಿನ ಪ್ರಧಾನಿ’ ಎಂದು ಬಿಂಬಿಸಿರುವ ಪೋಸ್ಟರ್ಗಳು ಇದೀಗ ಭಾರೀ ಚರ್ಚೆಗೆ ಕಾರಣವಾಗಿವೆ.
ಟಿವಿಕೆ ಪಕ್ಷಕ್ಕೆ ಇತ್ತೀಚೆಗೆ ಸೇರ್ಪಡೆಯಾದ ಸುಧಾಕರ್ ಈ ಪೋಸ್ಟರ್ಗಳನ್ನು ಹಾಕಿದ್ದಾರೆ ಎನ್ನಲಾಗಿದೆ. ಪೋಸ್ಟರ್ಗಳಲ್ಲಿ ವಿಜಯ್ ಅವರನ್ನು ಭವಿಷ್ಯದ ಪ್ರಧಾನಿಯಾಗಿ ಬಿಂಬಿಸಲಾಗಿದ್ದು, ಇದರ ಬೆನ್ನಲ್ಲೇ ವಿಜಯ್ ಅವರ ರಾಷ್ಟ್ರೀಯ ರಾಜಕೀಯ ಪ್ರವೇಶದ ಬಗ್ಗೆ ಮತ್ತೊಮ್ಮೆ ಚರ್ಚೆ ಶುರುವಾಗಿದೆ.
ಇತ್ತೀಚೆಗೆ ಟಿವಿಕೆ ನಾಯಕ ಆಧವ್ ಅರ್ಜುನ ಕೂಡ ವಿಜಯ್ ಅವರ ರಾಷ್ಟ್ರೀಯ ರಾಜಕೀಯದ ಬಗ್ಗೆ ಮಾತನಾಡಿದ್ದರು. ಕ್ಷೇತ್ರ ಪುನರ್ವಿಂಗಡಣೆ ವಿಚಾರದಲ್ಲಿ ಉತ್ತರ ಭಾರತದ ಕೆಲವೇ ರಾಜ್ಯಗಳು ಪ್ರಧಾನಿ ಯಾರು ಎಂಬುದನ್ನು ನಿರ್ಧರಿಸುವ ಪರಿಸ್ಥಿತಿ ಬದಲಾಗಬೇಕು ಎಂದು ಅವರು ಅಭಿಪ್ರಾಯಪಟ್ಟಿದ್ದರು.
ಮುಂದಿನ ದಿನಗಳಲ್ಲಿ ದಕ್ಷಿಣ ಭಾರತದ ರಾಜ್ಯಗಳಿಂದ, ಅದರಲ್ಲೂ ತಮಿಳುನಾಡಿನಿಂದಲೇ ಪ್ರಧಾನಿ ಹೊರಹೊಮ್ಮಬೇಕು ಎಂದು ಆಧವ್ ಅರ್ಜುನ ಹೇಳಿದ್ದರು. ಕ್ಷೇತ್ರ ಪುನರ್ವಿಂಗಡಣೆ ಸಂದರ್ಭದಲ್ಲಿ ತಮಿಳುನಾಡಿನ ಹಿತಾಸಕ್ತಿಯನ್ನು ಕಾಪಾಡಬೇಕು ಎಂದೂ ಅವರು ಒತ್ತಾಯಿಸಿದ್ದರು.
ಸಂಸತ್ತಿನಲ್ಲಿ ತಮಿಳುನಾಡಿಗೆ ಹೆಚ್ಚಿನ ಪ್ರಾತಿನಿಧ್ಯವಿದ್ದರೆ NEET, GST ಸೇರಿದಂತೆ ಹಲವು ವಿಚಾರಗಳಲ್ಲಿ ರಾಜ್ಯದ ಧ್ವನಿ ಇನ್ನಷ್ಟು ಬಲವಾಗುತ್ತಿತ್ತು ಎಂದು ಅವರು ಹೇಳಿದ್ದರು.
ಇನ್ನು ಟಿವಿಕೆಯ ಹಿರಿಯ ನಾಯಕ ಕೆ.ಎ. ಸೆಂಗೊಟ್ಟೈಯನ್ ಕೂಡ ವಿಜಯ್ ಬಗ್ಗೆ ದೊಡ್ಡ ಹೇಳಿಕೆ ನೀಡಿದ್ದಾರೆ. ಉತ್ತರ ಭಾರತದ ಜನರೂ ವಿಜಯ್ ಅವರನ್ನು ದೇಶವನ್ನು ಮುನ್ನಡೆಸಬಲ್ಲ ನಾಯಕನಾಗಿ ನೋಡುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.
ಎಂಜಿಆರ್ ಮತ್ತು ಜಯಲಲಿತಾ ಬಳಿಕ ತಮಿಳುನಾಡನ್ನು ಮಾತ್ರವಲ್ಲ, ಮುಂದಿನ ದಿನಗಳಲ್ಲಿ ಇಡೀ ಭಾರತವನ್ನು ಮುನ್ನಡೆಸುವ ಶಕ್ತಿ ವಿಜಯ್ ಅವರಿಗಿದೆ ಎಂದು ಸೆಂಗೊಟ್ಟೈಯನ್ ಅಭಿಪ್ರಾಯಪಟ್ಟಿದ್ದಾರೆ.
ಇದರ ನಡುವೆ ತಮಿಳುನಾಡಿನ ಮಾನವ ಸಂಪನ್ಮೂಲ ನಿರ್ವಹಣಾ ಸಚಿವ ಡಿ. ಶರತ್ಕುಮಾರ್ ಕೂಡ ವಿಜಯ್ ಅವರನ್ನು ‘ಮುಂದಿನ ಭಾರತೀಯ ಪ್ರಧಾನಿ’ ಎಂದು ಕರೆದಿದ್ದಾರೆ.
ಹೀಗಾಗಿ ತೂತುಕುಡಿಯಲ್ಲಿ ಕಾಣಿಸಿಕೊಂಡಿರುವ ಈ ಪೋಸ್ಟರ್ಗಳು ಸದ್ಯ ರಾಜಕೀಯ ವಲಯದಲ್ಲಿ ಹೊಸ ಚರ್ಚೆಗೆ ಕಾರಣವಾಗಿವೆ. ವಿಜಯ್ ಅವರ ರಾಜಕೀಯ ಪಯಣ ತಮಿಳುನಾಡಿಗೆ ಮಾತ್ರ ಸೀಮಿತವಾಗುತ್ತದೆಯೇ ಅಥವಾ ಮುಂದಿನ ದಿನಗಳಲ್ಲಿ ರಾಷ್ಟ್ರೀಯ ಮಟ್ಟಕ್ಕೂ ವಿಸ್ತರಿಸಲಿದೆಯೇ ಎಂಬ ಕುತೂಹಲ ಇದೀಗ ಮತ್ತಷ್ಟು ಹೆಚ್ಚಾಗಿದೆ.