ಕಿಚ್ಚ ಸುದೀಪ್ ಅವರ ಹುಟ್ಟುಹಬ್ಬಕ್ಕೆ ಸ್ಯಾಂಡಲ್ವುಡ್ನಿಂದ ಒಂದಾದ ಮೇಲೊಂದರಂತೆ ಸರ್ಪ್ರೈಸ್ಗಳು ಸಿಗುತ್ತಿವೆ. ಇದೀಗ ನಿರ್ದೇಶಕ ಪ್ರೇಮ್ ಕೂಡ ಕಿಚ್ಚನ ಫ್ಯಾನ್ಸ್ಗೆ ಭರ್ಜರಿ ಗುಡ್ನ್ಯೂಸ್ ನೀಡಿದ್ದಾರೆ.
ಸುದೀಪ್ ಅವರಿಗಾಗಿ ವಿಶೇಷ ವಿಡಿಯೋ ಹಂಚಿಕೊಂಡಿರುವ ಪ್ರೇಮ್, ಹುಟ್ಟುಹಬ್ಬದ ಶುಭಾಶಯ ತಿಳಿಸಿದ್ದಾರೆ. ಇದೇ ವಿಡಿಯೋದಲ್ಲಿ ಸುದೀಪ್ ಜೊತೆ ತಾವು ಮಾಡಲಿರುವ ಹೊಸ ಸಿನಿಮಾವನ್ನೂ ಅಧಿಕೃತವಾಗಿ ಘೋಷಿಸಿದ್ದಾರೆ.
ವಿಡಿಯೋದಲ್ಲಿ ವಿಭಿನ್ನ ಕ್ಯಾರಿಕೇಚರ್ ಮಾದರಿಯ ಚಿತ್ರಗಳು ಹಾಗೂ ಹಿನ್ನೆಲೆ ಸಂಗೀತ ಗಮನ ಸೆಳೆಯುತ್ತವೆ. ‘ಹೊಸ ಪ್ರಪಂಚ, ಹೊಸ ಅಧ್ಯಾಯ, ಹೊಸ ಆರಂಭ’ ಎಂಬ ಸಾಲುಗಳ ಮೂಲಕ ಹೊಸ ಸಿನಿಮಾದ ಬಗ್ಗೆ ಕುತೂಹಲ ಮೂಡಿಸಲಾಗಿದೆ. ಅಷ್ಟೇ ಅಲ್ಲ, ಅಕ್ಟೋಬರ್ 20ರಿಂದ ಹೊಸ ಅಧ್ಯಾಯ ಶುರುವಾಗಲಿದೆ ಎಂಬ ಸುಳಿವನ್ನೂ ನೀಡಿದ್ದಾರೆ.
ಸುದೀಪ್ ಹಾಗೂ ಪ್ರೇಮ್ ಈ ಹಿಂದೆ ‘ದಿ ವಿಲನ್’ ಸಿನಿಮಾಗಾಗಿ ಒಟ್ಟಿಗೆ ಕೆಲಸ ಮಾಡಿದ್ದರು. ಇದೀಗ ಹಲವು ವರ್ಷಗಳ ಬಳಿಕ ಈ ಜೋಡಿ ಮತ್ತೆ ಒಂದಾಗುತ್ತಿರುವುದು ಕಿಚ್ಚನ ಅಭಿಮಾನಿಗಳಲ್ಲಿ ನಿರೀಕ್ಷೆ ಹೆಚ್ಚಿಸಿದೆ.
ಪ್ರೇಮ್ ಈ ಸಿನಿಮಾದ ಬಗ್ಗೆ ಈ ಹಿಂದೆಯೇ ಸುಳಿವು ನೀಡಿದ್ದರು. ಕಾರ್ಯಕ್ರಮವೊಂದರಲ್ಲಿ ಸುದೀಪ್ ಜೊತೆ ಸಿನಿಮಾ ಮಾಡುವುದಾಗಿ ಹೇಳಿದ್ದರು. ಇದೀಗ ಆ ಮಾತು ನಿಜವಾಗಿದ್ದು, ಅಕ್ಟೋಬರ್ 20ರಿಂದ ಸಿನಿಮಾದ ಕೆಲಸಗಳು ಆರಂಭವಾಗಲಿವೆ.
ಸದ್ಯ ಸುದೀಪ್ ‘ಬಿಲ್ಲಾ ರಂಗ ಭಾಷಾ’ ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಈ ಸಿನಿಮಾ ಮುಗಿದ ಬಳಿಕ ಪ್ರೇಮ್ ನಿರ್ದೇಶನದ ಹೊಸ ಸಿನಿಮಾದ ಕೆಲಸ ಆರಂಭವಾಗುವ ಸಾಧ್ಯತೆಯಿದೆ.
ಇನ್ನು ‘ದಿ ವಿಲನ್’ ಸಿನಿಮಾ ನಿರೀಕ್ಷಿತ ಮಟ್ಟದಲ್ಲಿ ಯಶಸ್ಸು ಕಾಣದಿದ್ದರೂ, ಸಿನಿಮಾದ ಕೆಲವು ಹಾಡುಗಳು ಮತ್ತು ಸುದೀಪ್ ಅವರ ‘ಓಹ್ ಭ್ರಮೆ’ ಡೈಲಾಗ್ ಸಖತ್ ವೈರಲ್ ಆಗಿತ್ತು. ಹೀಗಾಗಿ ಈ ಬಾರಿ ಪ್ರೇಮ್-ಸುದೀಪ್ ಕಾಂಬಿನೇಷನ್ನಲ್ಲಿ ಯಾವ ರೀತಿಯ ಸಿನಿಮಾ ಬರಲಿದೆ ಎಂಬ ಕುತೂಹಲ ಈಗಲೇ ಶುರುವಾಗಿದೆ.
ಪ್ರೇಮ್ ಈ ಹಿಂದೆ ದರ್ಶನ್ ಜೊತೆ ಸಿನಿಮಾ ಮಾಡುವುದಾಗಿ ಘೋಷಿಸಿದ್ದರು. ಆದರೆ ಕಾರಣಾಂತರಗಳಿಂದ ಆ ಪ್ರಾಜೆಕ್ಟ್ ಮುಂದುವರಿಯಲಿಲ್ಲ. ಬಳಿಕ ಧ್ರುವ ಸರ್ಜಾ ಅಭಿನಯದ ‘ಕೆಡಿ’ ಸಿನಿಮಾವನ್ನು ಪೂರ್ಣಗೊಳಿಸಿದ ಪ್ರೇಮ್, ಇದೀಗ ಸುದೀಪ್ ಜೊತೆ ಹೊಸ ಪ್ರಾಜೆಕ್ಟ್ಗೆ ಕೈ ಹಾಕಿದ್ದಾರೆ.
ಸದ್ಯ ಕಿಚ್ಚ ಸುದೀಪ್ ಅವರ ಕೈಯಲ್ಲಿ ಹಲವು ಸಿನಿಮಾಗಳಿವೆ. ‘ಬಿಲ್ಲಾ ರಂಗ ಭಾಷಾ’ ಜೊತೆಗೆ ಸಮುದ್ರಕಣಿ ನಿರ್ದೇಶನದ ‘ಸ್ಕೂಲ್ ಬಸ್’, ಶ್ರೀಕೃಷ್ಣದೇವರಾಯನ ಕಥೆಯನ್ನು ಆಧರಿಸಿದ ‘ದೇವರಾಯ’, ಪ್ರೇಮ್ ನಿರ್ದೇಶನದ ಹೊಸ ಸಿನಿಮಾ ಹಾಗೂ ಕೆಆರ್ಜಿ ನಿರ್ಮಾಣದ ಮತ್ತೊಂದು ಸಿನಿಮಾ ಸೇರಿದಂತೆ ಹಲವು ಪ್ರಾಜೆಕ್ಟ್ಗಳಿವೆ.
ಒಟ್ಟಿನಲ್ಲಿ, ಸುದೀಪ್ ಬರ್ತ್ಡೇ ದಿನವೇ ಪ್ರೇಮ್ ನೀಡಿರುವ ಈ ಸರ್ಪ್ರೈಸ್ ಕಿಚ್ಚನ ಅಭಿಮಾನಿಗಳ ಸಂಭ್ರಮವನ್ನು ಮತ್ತಷ್ಟು ಹೆಚ್ಚಿಸಿದೆ. ಅಕ್ಟೋಬರ್ 20ರಂದು ಶುರುವಾಗಲಿರುವ ಈ ಹೊಸ ಪ್ರಯಾಣದಲ್ಲಿ ಪ್ರೇಮ್-ಸುದೀಪ್ ಏನನ್ನು ತೋರಿಸಲಿದ್ದಾರೆ ಅನ್ನೋದು ಈಗ ಸ್ಯಾಂಡಲ್ವುಡ್ನ ಹಾಟ್ ಟಾಪಿಕ್ ಆಗಿದೆ.