ಬಾಲಿವುಡ್ನ ಹಿರಿಯ ನಟ ನಸೀರುದ್ದೀನ್ ಶಾ ಅವರ ಹೇಳಿಕೆಯನ್ನು ನಟಿ ಹಾಗೂ ಬಿಜೆಪಿ ಸಂಸದೆ ಕಂಗನಾ ರನೌತ್ ತೀವ್ರವಾಗಿ ಖಂಡಿಸಿದ್ದಾರೆ. ಈ ವೇಳೆ ನಸೀರುದ್ದೀನ್ ಶಾ ಅವರನ್ನು ನರಿಗೆ ಹೋಲಿಕೆ ಮಾಡುವ ಮೂಲಕ ಕಂಗನಾ ನೀಡಿರುವ ಹೇಳಿಕೆ ಇದೀಗ ಚರ್ಚೆಗೆ ಗ್ರಾಸವಾಗಿದೆ.
ಇತ್ತೀಚೆಗೆ ದೇಶದಲ್ಲಿ ನಡೆದ ವಿದ್ಯಾರ್ಥಿಗಳ ಪ್ರತಿಭಟನೆಗಳ ಬಗ್ಗೆ ಪ್ರಮುಖ ನಟರು ಏಕೆ ಬಹಿರಂಗವಾಗಿ ಮಾತನಾಡುತ್ತಿಲ್ಲ ಎಂಬ ಪ್ರಶ್ನೆಗೆ ನಸೀರುದ್ದೀನ್ ಶಾ ಪ್ರತಿಕ್ರಿಯಿಸಿದ್ದರು. ಈ ವೇಳೆ, “ಆತ್ಮಸಾಕ್ಷಿ ಹೇಳಿದಾಗ ಅವರು ಮಾತನಾಡುತ್ತಾರೆ. ಬಾಯಿಯಲ್ಲಿ ಮೂಳೆ ಹಿಡಿದಿರುವ ನಾಯಿಗೆ ಬೊಗಳಲು ಸಾಧ್ಯವಿಲ್ಲ” ಎಂದು ಹೇಳಿದ್ದರು.
ಇದೀಗ ಜಾರ್ಖಂಡ್ನಲ್ಲಿ ನಡೆಯುತ್ತಿರುವ ವಿದ್ಯಾರ್ಥಿಗಳ ಪ್ರತಿಭಟನೆ ಕುರಿತು ನಸೀರುದ್ದೀನ್ ಶಾ ಮೌನವಾಗಿರುವುದನ್ನು ಕಂಗನಾ ಪ್ರಶ್ನಿಸಿದ್ದಾರೆ. ತಮ್ಮ ಇನ್ಸ್ಟಾಗ್ರಾಂ ಸ್ಟೋರಿಯಲ್ಲಿ ನಟ ಪಿಯುಷ್ ಮಿಶ್ರಾ ಅವರ ಪ್ರತಿಕ್ರಿಯೆಯನ್ನು ಹಂಚಿಕೊಂಡಿರುವ ಕಂಗನಾ, ನಸೀರುದ್ದೀನ್ ಶಾ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
“ಇಂದಿನ ಕಾಲದಲ್ಲಿ ಯಾರನ್ನಾದರೂ ನಾಯಿ ಎಂದು ಕರೆಯುವುದು ಕೂಡ ಹೊಗಳಿಕೆಯೇ. ನಿಷ್ಠೆ ಮತ್ತು ಮುಗ್ಧತೆ ಈಗ ಅಪರೂಪ. ನಸೀರುದ್ದೀನ್ ಅವರಂತಹ ನರಿ ಆಗುವುದಕ್ಕಿಂತ ನಾಯಿಯಾಗಿರುವುದೇ ಲೇಸು” ಎಂದು ಕಂಗನಾ ಹೇಳಿದ್ದಾರೆ.
ಜಾರ್ಖಂಡ್ನಲ್ಲಿ ವಿದ್ಯಾರ್ಥಿಗಳ ಮೇಲೆ ನಡೆದ ಪೊಲೀಸ್ ಕ್ರಮದ ಬಗ್ಗೆಯೂ ಕಂಗನಾ ಪ್ರಶ್ನೆ ಎತ್ತಿದ್ದಾರೆ. ವಿದ್ಯಾರ್ಥಿಗಳ ಮೇಲೆ ಲಾಠಿಚಾರ್ಜ್ ನಡೆಸಲಾಗಿದೆ, ಜಲಫಿರಂಗಿ ಹಾಗೂ ಅಶ್ರುವಾಯು ಬಳಸಲಾಗಿದೆ. ಈ ಬಗ್ಗೆ ಉತ್ತರ ಬೇಕು ಎಂದು ಅವರು ಹೇಳಿದ್ದಾರೆ.
ನೇಮಕಾತಿ ಪರೀಕ್ಷೆಗಳಲ್ಲಿನ ಅಕ್ರಮಗಳನ್ನು ವಿರೋಧಿಸಿ ಜಾರ್ಖಂಡ್ನಲ್ಲಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸುತ್ತಿದ್ದಾರೆ. ಸೋಮವಾರ ವಿಧಾನಸಭೆ ಬಳಿ ನಡೆದ ಘರ್ಷಣೆಯಲ್ಲಿ ಹಲವು ಪ್ರತಿಭಟನಾಕಾರರು ಹಾಗೂ ನಾಲ್ವರು ಪೊಲೀಸರು ಗಾಯಗೊಂಡಿದ್ದಾರೆ. ಪ್ರತಿಭಟನಾಕಾರರನ್ನು ಚದುರಿಸಲು ಪೊಲೀಸರು ಜಲಫಿರಂಗಿ, ಅಶ್ರುವಾಯು ಹಾಗೂ ಲಾಠಿಚಾರ್ಜ್ ಬಳಸಿದ್ದರು ಎಂದು ವರದಿಯಾಗಿದೆ.
ಈ ಹಿನ್ನೆಲೆಯಲ್ಲಿ ಕಂಗನಾ ರನೌತ್ ಅವರ ಹೇಳಿಕೆ ಮತ್ತಷ್ಟು ಚರ್ಚೆಗೆ ಕಾರಣವಾಗಿದ್ದು, ಹಿರಿಯ ನಟ ನಸೀರುದ್ದೀನ್ ಶಾ ವಿರುದ್ಧದ ಅವರ ವಾಗ್ದಾಳಿ ಇದೀಗ ಬಾಲಿವುಡ್ ಹಾಗೂ ರಾಜಕೀಯ ವಲಯದಲ್ಲೂ ಗಮನ ಸೆಳೆದಿದೆ.